ಕವಿತೆಗೊಂದು ಚಿತ್ರ ಬೇಕೆ ?
ಕವಿಯೆ ನಿನ್ನ ಕವಿತೆಗೊಂದು
ರಂಗು ರಂಗಿನ ಚಿತ್ರವೇಕೆ
ಬರಹಕ್ಕೊಂದು ಹೂವ ಬಳ್ಳಿ
ಅದರ ಮೇಲೆ ಚಿಟ್ಟೆ ಬೇಕೆ ?
ಮರಳುಗಾಡಿನಲ್ಲಿ ನೀನು
ತೊಟ್ಟು ಹನಿಗೆ ಅಲೆದರೂನು
ನಿನ್ನ ಲೇಖನಿ ಯಲ್ಲಿ ನೀನು
ಸಮುದ್ರವನ್ನೇ ಮಥಿಸಬಾರದೇಕೆ ?
ನಿನ್ನ ಕಣ್ಣಿನಲ್ಲಿ ಪೊರೆಯು ಬಂದು
ಮಂಜು ಕವಳ ಕವಿದರೇನು
ಕವಿತೆಯಲ್ಲಿ ಸಗ್ಗ ಇಳಿಸಿ ನೀನು
ಇಳೆಯ ಜನರ ರಮಿಸಬಾರದೇಕೆ ?
ರಾಜ್ಯವೆಲ್ಲಾ ಕೊಳ್ಳೆಹೋಗಿ
ಲೋಕವೆಲ್ಲಾ ಕತ್ತಲಾಗಿ
ಬೆಳಕು ಬಂಧಿಯಾದರೂನು
ಎದೆಯ ಗುಡಿಗೆ ಕಿಚ್ಚು ಹಚ್ಚಿ
ಆತ್ಮವನ್ನೆ ಸುಟ್ಟು ನೀನು
ಜಗದ ಇರುಳ ಕಳೆಯ ಬಾರದೇಕೆ ?
ಮನುಜರೆದೆಗೆ ಬರವು ಬಡಿದು
ಅಂತಃಕರಣ ಸೆಲೆಯು ಬತ್ತಿ
ಧರೆಯೇ ಹೊತ್ತಿ ಉರಿದರೂನು
ಉರಿವ ಹೃದಯ ಜ್ವಾಲೆಗಳಿಗೆ
ನಿಟ್ಟುಸಿರಿನ ಗಾಳಿ ಬೀಸಿ
ಆಶ್ರು ಜಲದ ಮಳೆಯ ಸುರಿಸಿ
ಮಳೆ ಬಿಲ್ಲನು ರಚಿಸಬಾರದೇಕೆ ?
ಬೇಲಿಯೆಲ್ಲಾ ಶೂಲವಾಗಿ
ದೇಶವೆಲ್ಲಾ ಜೈಲೆ ಆಗಿ
ನೀನೆ ನಿನ್ನ ಮನೆಯ ಒಳಗೆ
ಬಂಧಿಯಾಗಿ ಹೋದರೇನು
ಕವಿತೆಯೆಂಬ ಹಕ್ಕಿಗೊಂದು
ಒಲವ ರೆಕ್ಕೆ ಪುಕ್ಕ ಬಿಡಿಸಿ
ಸ್ವತಂತ್ರ ಕನಸಿನಾಗಸಕ್ಕೆ
ಒಮ್ಮೆ ಹಾರಿ ಬಿಡ ಬಾರದೇಕೆ ?
-- ಪುನೀತ್ ಅಪ್ಪು


Comments
Post a Comment